Wednesday, January 14, 2015

ಅಕ್ಕ

"ನಮ್ಮ ಸಂಗೀತ ಇದೇ ಊರಿನಲ್ಲಿ ಟೀಚರ್ ಕೆಲಸ ಹುಡುಕಿಕೊಂಡು ಬಂದಿದ್ದಾಳಂತೆ ಕಣೇ ಶಾರದಾ.. ನಾನೇ ಇಂದು ರೇಷನ್ ಅಂಗಡಿ ಬಳಿ ಅವಳನ್ನು ನೋಡಿದೆ.. "
ಅಪ್ಪ ಅಮ್ಮನ ಬಳಿ ಹೇಳುತ್ತಿದ್ದರು.
ನನಗೆ ಆದ ಸಂತಸಕ್ಕೆ ಪಾರವೇ ಇಲ್ಲ. ನನ್ನ ಅಮ್ಮ ಏನೆಂದಳೋ ಗೊತ್ತಿಲ್ಲ..
ಆದರೆ ನಾನಂತೂ ಅವಳನ್ನು ಧಿಕ್ಕರಿಸಿಯಾದರೂ , ಸಂಗೀತ ಅಕ್ಕನನ್ನು ಕಾಣಲು ಹೋಗುತ್ತೇನೆ.
~~~~~~~~~~~~~~~~~~
ಸುಮಾರು ಎಂಟು ವರ್ಷದ ಹಿಂದೆ ಸಂಗೀತಾಳ ಮದುವೆಯಾಗಿತ್ತು.
ಬಡ ಹುಡುಗ ರಮೇಶ್ ನೋಡುವುದಕ್ಕೆ ಅತಿ ಸುಂದರನಾದರೂ, ಬಡವ ಹಾಗೂ ಅನಾಥನಾಗಿದ್ದ.
ಅವನ ಜೀವನದಲ್ಲಿ ಮದುವೆಯ ಕನಸುಗಳು ಸಾವಿರ ಸಲ ಬಂದಿದ್ದರೂ ಬಡತನದ ಸಲುವಾಗಿ ಆತ ಯಾವ ಹುಡುಗಿಗೂ ಹಿಡಿಸಲೇ ಇಲ್ಲ.
ಕೊನೆಗೆ ಅವನ ದೂರದ ಸಂಬಂಧಿಯಾದ ನಮ್ಮ ಮಾವನೇ ಅವರ ಮಗಳು ವನಜಳನ್ನು ಹೇಗೋ
ಒಪ್ಪಿಸಿ ಮದುವೆಯ ಸಿದ್ಧತೆ ನಡೆಸಿದರು. ಮದುವೆಯ ದಿನವೇ ಎಲ್ಲಾರಿಗೂ ಕೈಕೊಟ್ಟು ವನಜಾ ಬಾಳೆಮಂಡಿಯ ಕೆಲಸದ ಹುಡುಗನ ಜೊತೆ ಓಡಿಹೋಗಿದ್ದಳು.
ನನಗೆ ಆಗ ಹದಿನೆಂಟು ವರ್ಷ ಇನ್ನು ತುಂಬಿರಲಿಲ್ಲ.. ಆದ್ದರಿಂದ ,ಮಾವನ ಮರ್ಯಾದೆ ಉಳಿಸಲೆಂದು ನಮ್ಮಕ್ಕ ಸಂಗೀತಾಳನ್ನು ರಮೇಶನ ಜತೆ ಮದುವೆ ಮಾಡಿಬಿಟ್ಟರು.
ಅಕ್ಕ ಪಾಪದವಳು.
ತಾನಾಯಿತು, ತನ್ನ ಕೆಲಸವಾಯಿತು ಎಂದು ತೆಪ್ಪಗೆ ಇದ್ದುಬಿಡುವಳು. ನಾನೋ,ಬಹಳ ಚೂಟಿ, ಜೋರೆಂದು ಎಲ್ಲರೂ ಹೇಳುತ್ತಿದ್ದರು. ಅಕ್ಕನಿಗೆ ಓದು ಮುಂದುವರೆಸಲಾಗಲಿಲ್ಲ. ರಮೇಶ, ಬೆಂಗಳೂರಿನಲ್ಲಿ ಒಂದು ಸಣ್ಣ ಹೋಟೆಲ್ ನಲ್ಲಿ ಮಾನೇಜರ್ ಆಗಿದ್ದ.. ಕಡಿಮೆ ಸಂಬಳವಾದರೂ ಇಬ್ಬರಿರುವ ಮನೆಗೆ ಸಾಕೆನಿಸುತ್ತಿತ್ತು.
ಅಕ್ಕ ಮನೆಗೆಲಸ ಮಾಡಿ ,ಗಂಡನ ಬೇಕು-ಬೇಡಗಳನ್ನು ನೋಡಿಕೊಳ್ಳಬೇಕಿತ್ತು.
ಅತ್ತೆ,ಮಾವ ಇಲ್ಲದ ಮನೆ ಆಕೆಗೆ ಬೇಸರವೆನಿಸಿತ್ತು.
ಅದಕ್ಕೇ ತವರಿಗೆ ಆಗಾಗ ಬಂದು ನಮ್ಮನ್ನೆಲ್ಲ ಮಾತಾಡಿಸಿ ಹೋಗುತ್ತಿದ್ದಳು. ನಮ್ಮೂರಿಗೆ ಆಗ ಟ್ರೈನ್'ಗಳು ಅಷ್ಟಾಗಿ ಇರಲಿಲ್ಲ..
ಅದಕ್ಕಾಗಿಯೇ ಅಕ್ಕ ಸದಾ ನಮಗೆ ಪತ್ರ ಬರೆದು ವಿಷಯ ತಿಳಿಸುತ್ತಿದ್ದಳು..
ಆದರೆ ಅಕ್ಕ ಈ ಬಾರಿ ಬಂದು ಹೋದ ಮೇಲೆ ಮೂರು ತಿಂಗಳ ನಂತರವೂ ಪತ್ರ ಬರೆಯಲೇ ಇಲ್ಲ. ನನ್ನ ತಂದೆಯವರು ಪೌರೋಹಿತ್ಯ ಮಾಡುತ್ತ ಜೀವನ ಸಾಗಿಸುತ್ತಾರೆ..
ಅಮ್ಮ ಮನೆಯಲ್ಲೇ ಮಕ್ಕಳಿಗೆ ಸಂಗೀತ ಪಾಠ ಹೇಳಿಕೊಡುತ್ತಾಳೆ.
ಹಾಗೇನೂ ಸ್ಥಿತಿವಂತರಲ್ಲ ಆದರೂ ಉಣಲು,ಉಡಲು ಏನೂ ಕೊರತೆ ಇರಲಿಲ್ಲ.
ನಾವು ಆಕಳು, ಕುರಿ ಇತರೇ ಸಾಕಿದ್ದರಿಂದ ಮನೆ ಸ್ವಲ್ಪ ಸಮೃದ್ಧತೆಯಿಂದ ಕೂಡಿತ್ತು.
ಅಕ್ಕ ಬಂದಾಗಲೆಲ್ಲ ತರುತ್ತಿದ್ದ ತಿನಿಸುಗಳಿಗಾಗಿ ಕಾಯುವುದೇ ನನ್ನ ಕಾಯಕವಾಗಿತ್ತು.
ನಾನಾಗ ಪಟ್ಟಣವನ್ನೇ ಒಮ್ಮೆಯೂ ನೋಡಿರಲಿಲ್ಲ..ನನಗೆ ಅಲ್ಲಿ ವಾತಾವರಣ, ಜನರು, ಉಡುಗೆ-ತೊಡುಗೆ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಾಗಿದ್ದೇ ಅಕ್ಕನು ಬರೆದ ಪತ್ರಗಳಿಂದ.
ಆದರೆ ಮೂರು ತಿಂಗಳಾದರೂ ಅಕ್ಕ ಒಂದೂ ಪತ್ರ ಬರೆಯದೆ ಇದ್ದದ್ದು ನನಗೆ ಅತ್ಯಂತ ಬೇಸರ ಉಂಟುಮಾಡಿತು.
ಅಪ್ಪ ಕಾಳಜಿ ವಹಿಸುವುದಲ್ಲ ಅಂತಲ್ಲ.
ಅವರು ಗಮನ ಕೊಡುತ್ತಿರಲಿಲ್ಲ ..
ಅಂತೂ ಅವರನ್ನು ಒಪ್ಪಿಸಿ ಬೆಂಗಳೂರಿಗೆ ಹೋಗುವಂತೆ ಮಾಡಿದಳು ಅಮ್ಮ.
ಬೆಂಗಳೂರಿಗೆ ಹೋದಾಗ ಅಪ್ಪನಿಗೆ ತಿಳಿದದ್ದು ಏನೆಂದರೆ ಅಕ್ಕ ಗರ್ಭಿಣಿ ಎಂದು.
ಆಕೆಗೆ ರಮೇಶ ತುಂಬಾ ಮಾನಸಿಕ, ದೈಹಿಕ ಹಿಂಸೆ ಕೊಡುತ್ತಿದ್ದನಂತೆ.
ನಾಲ್ಕಾರು ದಿನ ಮನೆಗೇ ಹೆಣ್ಣು ಮಕ್ಕಳನ್ನು ಕರೆದುಕೊಂಡು ಬಂದು ಅಸಹ್ಯವಾಗಿ ನಡೆದುಕೊಂಡ ...
ಅಯ್ಯೋ, ಗರ್ಭಿಣಿ ಹೆಂಗಸು, ಒಬ್ಬಳೇ ಏನು ಮಾಡಿಯಾಳು..
ದೂರದ ಊರಿಗೆ ಬೇರೆ ಮತ್ತೆ-ಮತ್ತೆ ಹೋಗಿ ಬರಲಾಗದು.
ಅಪ್ಪ ತಡಮಾಡದೆ ಅಕ್ಕನನ್ನು ಕರೆದುಕೊಂಡು ಅದೇ ರಾತ್ರಿ ಬಸ್ಸಿನಲ್ಲಿ ಆಗದೆಂದು ಸಾವಿರದ ಎಂಟುನೂರು ರೂಪಾಯಿ ಬಾಡಿಗೆ ಕೊಟ್ಟು ಟ್ಯಾಕ್ಸಿ ಮಾಡಿಕೊಂಡು ಬಂದುಬಿಟ್ಟರು.
ಪಾಪಿ ಆ ನೀಚ ರಮೇಶ, ನನ್ನ ಅಕ್ಕನನ್ನು ಮೈತುಂಬ ಬಾಸುಂಡೆ ಬರುವಂತೆ ಹೊಡೆದಿದ್ದ. ಆಗ ಎಲ್ಲರಿಗಿಂತ ನನಗೆ ಕೋಪವು ನೆತ್ತಿಗೇರಿತ್ತು. ಮುಗ್ಧ ಹುಡುಗಿಯನ್ನು ಪ್ರೀತಿ, ಕಳಕಳಿಯಿಂದ ನೋಡಿಕೊಳ್ಳದೆ ಅವಳನ್ನು ಹಿಂಸೆಗೆ ಗುರಿಮಾಡುವ ಗಂಡುಗಳು ಹುಟ್ಟುತ್ತಲೇ ಸತ್ತುಹೋಗಬಾರದೇ ಎನಿಸಿತು. ಗಂಡುಮಕ್ಕಳ ಮೇಲೇ ನನಗರಿವಿಲ್ಲದೇ ಅಸಹ್ಯ ಭಾವನೆ ಬಂದುಬಿಟ್ಟಿತ್ತು. ಅಕ್ಕ, ನಮ್ಮ ಮನೆಯಲ್ಲೇ ಇದ್ದರೂ ನೆಮ್ಮದಿ ಕಾಣಲಿಲ್ಲ . ಆ ಪಾಪಿ, ಇಲ್ಲಿಗೇ ಬಂದ. ಕಿರುಚಾಟ ನಡೆಸಿ ನಮ್ಮ ತಂದೆಯ ಮಾನವನ್ನು ಹರಾಜು ಹಾಕಿದ. ಅಕ್ಕನ ಶೀಲದ ಬಗ್ಗೆ ಕೆಟ್ಟ ಮಾತಾಡಿದ್ದಲ್ಲದೆ ನನ್ನ ಕಡೆಗೂ ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದ.. ಊರಿನ ಜನ ಸೇರಿ ತೀರ್ಮಾನ ಮಾಡಿ ಅಕ್ಕ ಬಾಣಂತನಕ್ಕೆ ಇಲ್ಲಿ ಬರುವುದಾಗಿಯೂ, ಸಧ್ಯಕ್ಕೆ ಅವಳು ಗಂಡನ ಜೊತೆ ಅವಳ ಮನೆಗೆ ಹೋಗಬೇಕಾಗಿಯೂ ಹೇಳಿಬಿಟ್ಟರು. ನಮಗಂತೂ ಆದ ಸಂಕಟ ಅಷ್ಟಿಷ್ಟಲ್ಲ.. ಪಾಪದ ಅಕ್ಕ ಹೆದರುತ್ತಲೇ ಅವನ ಜೊತೆ ಹೊರಟಳು. ಅಂದು ಊರವರ ನ್ಯಾಯ ಕೇಳದಿದ್ದರೆ ನಮ್ಮ ಅಕ್ಕನ ಮಗು ಉಳಿಯುತ್ತಿತ್ತು.. ಅಲ್ಲಿ ಹೋದ ಮೇಲೆ ಆದದ್ದೇ ಇದು.. ಆ ಪಾಪಿ, ಅಕ್ಕನು ಗಂಡು ಹೆರುತ್ತಾಳೆಂದು ಸಂಭ್ರಮದಿಂದ ಅವಳ ಉಪಚಾರ ಮಾಡಿ, ಹೂವಂತೆ ನೋಡಿಕೊಂಡ. ಆದರೆ , ಲಂಚ ಕೊಟ್ಟು ವೈದ್ಯರನ್ನು ಕೇಳಿದಾಗ ಗೊತ್ತಾದ ವಿಷಯ ಅದು ಹೆಣ್ಣು ಭ್ರೂಣ ... ಅಂದೇ ಅವಳನ್ನು ಆಸ್ಪತ್ರೆಗೆ ,ಚಿಕಿತ್ಸೆಗೆಂದು ಸುಳ್ಳು ಹೇಳಿ ಕರೆದುಕೊಂಡು ಹೋದ. ಡಾಕ್ಟರ್ ಇವನಿಂದ ಹಣ ಪಡೆದುಕೊಂಡು, ಅವಳ ಜ್ಞಾನ ತಪ್ಪಿಸಿದರು.
ಆಗಲೇ ಆರು ತಿಂಗಳಾದ್ದರಿಂದ ಮಗುವನ್ನು ಕೊಲ್ಲಲಾಗದೇ ಆಪರೇಶನ್ ಮಾಡಿ ಹೊರತೆಗೆದರು. ಆಗ ರಮೇಶನು, ಯಾರಿಗೂ ತಿಳಿಯದಂತೆ ಮಗುವಿನ ಪ್ರಾಣ ತೆಗೆದುಬಿಟ್ಟನು ... ಆ ಏನೂ ಅರಿಯದ ಕಂದ, ಕಣ್ಣುಬಿಡುತ್ತಲೇ ಸಾಯುವಂತಾಯಿತು.
ಜಗದಲ್ಲಿ ಎಷ್ಟೋ ಜನರು ಮಗುವಿನ ಅಳು ಕೇಳಲು,ತಮ್ಮ ಮಡಿಲಲ್ಲಿ ಮಲಗಿಸಿ ಆಡಿಸಲು ಕಾತರದಿಂದ ಕಾಯುತ್ತಾರೆ..
ಆದರೆ ಇಲ್ಲಿ ಆ ಪುಟ್ಟ ಜೀವಕ್ಕೇ ಬೆಲೆ ಇಲ್ಲದಾಗಿತ್ತು. ಅಕ್ಕನಿಗೆ ಎಚ್ಚರವಾದಾಗ ಅವಳ ಹೊಟ್ಟೆ ಬರಿದಾಗಿತ್ತು. ಅವಳ ಹೃದಯ ಮಾತ್ರ ದು:ಖದಿಂದ ಭಾರವಾಗಿತ್ತು.
ಬಹುಶಃ ಅವಳಿಗೆ ಗೊತ್ತಿತ್ತೇನೋ..
. ತನ್ನ ಮುದ್ದು ಕಂದಮ್ಮ ಚಿರನಿದ್ರೆಗೆ ಜಾರಿದೆ ಎಂದು. ಅವಳು ಅಳಲಿಲ್ಲ. ಕಿರುಚಲಿಲ್ಲ. ನಕ್ಕಳು.. ಅಷ್ಟೇ ಅವಳು ಮಗುವನ್ನು ಕಳೆದುಕೊಂಡು ಹುಚ್ಚಿ ಆದಳೆಂದು ಪಾಪಿ ರಮೇಶ ಎಲ್ಲರ ಬಾಯಿ ಮುಚ್ಚಿಸಿದ..
~~~~~~~~~~~~~~~~~
ಅಂದು ಆಸ್ಪತ್ರೆಯಿಂದ ಓಡಿಹೋದ ಸಂಗೀತಕ್ಕ ಈಗ ನಮ್ಮೂರಿನ ಹೈಸ್ಕೂಲ್ಗೆ ಮಾಥ್ಸ್ ಟೀಚರಾಗಿ ಬಂದಾಗ ಅಮ್ಮ ನಂಬಲೇ ಇಲ್ಲ.
ಅಪ್ಪನ ಮನಸ್ಸು ಅವಳೇ ನಮ್ಮ ಸಂಗೀತಾ ಎನ್ನುತಿತ್ತು.
ಈಕೆ ಯಾರೋ ಬೇರೆ ಅಂತೆ ಎಂದು ಸುಳ್ಳು ಹೇಳಿ, ನಾನು ಹುಣಸೂರಿಗೆ ಹೋಗಿದ್ದ ಸಮಯದಲ್ಲಿ ಅಕ್ಕನನ್ನು ಭೇಟಿ ಮಾಡಲು ಹೋದಳಂತೆ ಅಮ್ಮ.
ಎಷ್ಟಾದರೂ ಒಬ್ಬ ತಾಯಿಯ ಸಂಕಟ ಕೇಳಲು ಇನ್ನೊಂದು ತಾಯಿಯೇ ಹೋಗಬೇಕಲ್ಲವೇ? ನನ್ನಕ್ಕ ಈಗ ಸುಖವಾಗಿದ್ದಾಳೆ... ಅದಕ್ಕಿಂತ ಮಿಗಿಲಾಗಿ ಆಕೆ ಎಲ್ಲ ಮರೆತು, ಹೊಸ ವ್ಯಕ್ತಿತ್ವ ಪಡೆದಿದ್ದಾಳೆ...
ಕಾಲೇಜು ಓದಿ ,ಉನ್ನತ ಪದವಿಯನ್ನು ಯಾರೋ ಧರ್ಮಾತ್ಮರ ಸಹಾಯದಿಂದ ಪಡೆದ ಅಕ್ಕ ಊರಿನ ಬಡ ಮಕ್ಕಳ ವಿದ್ಯೆಗೆ ಸಹಾಯ ಮಾಡುತ್ತಾ
, ತನ್ನ ಜೀವನದ ಗುರಿಯನ್ನು ಕಂಡುಕೊಂಡಿದ್ದಾಳೆ..
ನನ್ನ ಪ್ರೀತಿಯ ಅಕ್ಕ..

No comments:

Post a Comment